Latest Newsಪ್ರಚಲಿತ

ಬೂಕರ್‌ ಪ್ರಶಸ್ತಿ ವಿಜೇತೆಯ ಕೃತಿಯಲ್ಲಿದೆ ಮುಸಲ್ಮಾನರ ಭಯಾನಕ ಜೀವನ ಪದ್ಥತಿಯ ಅನಾವರಣ!

Share News

ಕನ್ನಡದ ಲೇಖಕಿ, ಕತೆಗಾರ್ತಿ ಬಾನು ಮುಷ್ತಾಕ್‌ ಅವರ ʼಹಾರ್ಟ್‌ ಲ್ಯಾಂಪ್‌ʼ ಕೃತಿ ಇಂಟರ್‌ನ್ಯಾಷನಲ್‌ ಬೂಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿಗಾಗಿ ಜಾಗತಿಕ ಸಾಹಿತ್ಯ ಕದನವೇ ನಡೆದು ಹೋಗುತ್ತದೆ. ಜಾಗತಿಕ ಪ್ರಸಿದ್ಧಿ ಪಡೆದವರ ಕೃತಿಗಳನ್ನು ತೀರ್ಪುಗಾರರು ಬಹು ಸುಲಭವಾಗಿ ಪರಿಗಣಿಸುತ್ತಾರೆ. ಆದರೆ ಬಾನು ಮುಷ್ತಾಕ್‌ ಅವರಿಗೆ ಅಂಥಾ ಅಂತಾರಾಷ್ಟ್ರೀಯ ಖ್ಯಾತಿಯೇನೂ ಇರಲಿಲ್ಲ. ಆದರೂ ಅವರ ಕೃತಿ ತೀರ್ಪುಗಾರರ ಮನಸ್ಸನ್ನು ಗೆದ್ದುಬಿಟ್ಟಿತು. ಬಾನು ಅವರ ಕೃತಿಯು ಮುಸ್ಲಿಂ ಸ್ತ್ರೀಯರ ಬವಣೆಗಳನ್ನು ಚಿತ್ರಿಸಿದೆ.

ಬೂಕರ್‌ ಪ್ರಶಸ್ತಿಗೆ ಕತೆ ಚೆನ್ನಾಗಿರಬೇಕು ಅಥವಾ ಓದಿಸಿಕೊಂಡು ಹೋಗಬೇಕು ಎಂಬುದು ಮುಖ್ಯವಲ್ಲ. ಆ ಕೃತಿಯಲ್ಲಿ ಪ್ರತಿಪಾದಿಸಲಾದ ವಿಷಯಗಳು ಬಡವರ, ಶೋಷಿತರ ಪರವಾಗಿರಬೇಕು. ಮಹಿಳೆಯರ ನೋವುಗಳನ್ನು ಬಿಂಬಿಸಬೇಕು, ಸ್ತ್ರೀ ಸಮಾನತೆಯ ಆಶಯವನ್ನು ಪ್ರತಿಪಾದಿಸಬೇಕು. ಅಧಿಕಾರದಲ್ಲಿರುವವರ, ಅದರಲ್ಲೂ ಬಲಪಂಥೀಯ ಆಡಳಿತಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸಬೇಕು. ಲೇಖಕರು ಸಾಮಾಜಿಕ ಚಳವಳಿಗಳಲ್ಲಿ ಒಡನಾಟ ಹೊಂದಿರುವವರಾದರೆ ಇನ್ನೂ ಬೆಸ್ಟ್.‌ ಈ ಹಿಂದೆ ಪ್ರಶಸ್ತಿ ಪಡೆದ ಅನೇಕರು ಸಾಮಾಜಿಕ ಹೋರಾಟಗಾರರು, ದೇಶದ ಆಡಳಿತಗಳಿಂದ ಬಹಿಷ್ಕೃತರಾದವರು, ಜೈಲಿಗೆ ಹೋದವರು ಇತ್ಯಾದಿ ಆಗಿದ್ದಾರೆ. ಇಂಥವರನ್ನೇ ತೀರ್ಪುಗಾರರು ಹುಡುಕುತ್ತಾರೆ.

ಬಾನು ಮುಷ್ತಾಕ್‌ ಅವರ ಹಿನ್ನಲೆ ಇದೆಲ್ಲದರಲ್ಲೂ ಅರ್ಹತೆ ಹೊಂದಿತ್ತು. ಮುಷ್ತಾಕ್ ಅವರ ಕತೆಗಳು ಮುಸ್ಲಿಂ ಸಮುದಾಯದಲ್ಲಿ ತುಳಿತಕ್ಕೆ ಒಳಗಾದ ಸ್ತ್ರೀಯರ ನೋವುಗಳನ್ನು ಅಭಿವ್ಯಕ್ತಿಸಿವೆ. ತ್ರಿವಳಿ ತಲಾಖ್‌ನಿಂದ ನೊಂದವರು, ಫ್ಯೂಡಲ್‌ ಗಂಡಂದಿರು ಹಾಗೂ ಧಾರ್ಮಿಕ ಗುರುಗಳಿಂದ ಶೋಷಣೆಗೆ ಒಳಗಾದವರು ಇವರ ಕತೆಗಳಲ್ಲಿ ಇದ್ದಾರೆ. ಒಂದು ಬಾರಿ ಮುಸಲ್ಮಾನ ಸಮುದಾಯದೊಳಗಿನ ಅಂಧತ್ವದ ಬಗ್ಗೆ ಬರೆದಿದ್ದದ್ದಾಗಿ ಅವರ ಮೇಲೆ ಮತಾಂಧರು ಹಲ್ಲೆ ಕೂಡಾ ನಡೆಸಿದ್ದರು. ಮುಸ್ಲಿಂ ಸಮುದಾಯದ ಒಳಗಿನಿಂದಲೇ ಫತ್ವಾ ಕೂಡ ಹೊರಡಿಸಲಾಗಿತ್ತು.

ಬಾನು ಅವರು ತಮ್ಮ ಎದೆಯ ಹಣತೆ ಕೃತಿಯಲ್ಲಿ ಮುಸಲ್ಮಾನ ಸಮುದಾಯದಲ್ಲಿರುವ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. ಈ ಕೃತಿಯಲ್ಲಿ ಒಬ್ಬಾಕೆ ಮುಸ್ಲಿಂ ಮಹಿಳೆ ಇರ್ತಾಳೆ. ಆಕೆಯ ಗಂಡ ಅವಳಿಗೆ ನಾಲ್ಕೋ ಐದೋ ಮಕ್ಕಳನ್ನು ಕೊಡ್ತಾನೆ. ನಂತರ ಬೇರೊಬ್ಬ ಹೆಣ್ಣಿನತ್ತ ಕಣ್ಣು ಹಾಕಿ ಆಕೆಯ ಹಿಂದೆ ಹೋಗುತ್ತಾನೆ. ಈಕೆ ಗಂಡನಿಂದ, ಇತ್ತ ತವರು ಮನೆಯಿಂದ, ಸಮಾಜದಿಂದಲೂ ತಿರಸ್ಕೃತಳಾಗಿ ಬದುಕಬೇಕಾಗುತ್ತದೆ. ಈ ಬವಣೆಯನ್ನು ತಾಳಲಾಗದೆ ಒಂದು ಹಂತದಲ್ಲಿ ಆಕೆ ಸಾಯುವ ನಿರ್ಧಾರಕ್ಕೆ ಬರುತ್ತಾಳೆ. ಪುಟ್ಟ ಹಸುಗೂಸನ್ನು ಮನೆಯೊಳಗೆ ಮಲಗಿಸಿ ಅಂಗಳಕ್ಕೆ ಬಂದು ಮೈಗೆ ಸೀಮೆಎಣ್ಣೆ ಸುರಿದುಕೊಂಡು ಇನ್ನೇನು ಬೆಂಕಿ ಹಚ್ಚಬೇಕು ಎಂಬಷ್ಟರಲ್ಲಿ, ಒಳಗಿದ್ದ ಮಗು ಚಿಟಾರ್‌ ಎಂದು ಚೀರುತ್ತದೆ. ಈ ಮಹಿಳೆಯ ದೊಡ್ಡ ಮಗಳು ಆ ಹಸುಗೂಸನ್ನು ಎತ್ತಿಕೊಂಡು ಬಂದು ಈಕೆಯ ಕಾಲಬುಡದಲ್ಲಿ ಇಟ್ಟು, ಇದಕ್ಕಾಗಿ ನೀನು ಬದುಕಬೇಕು ಎನ್ನುತ್ತಾಳೆ. ಮಹಿಳೆ ತನ್ನ ನಿರ್ಧಾರ ಬದಲಾಯಿಸುತ್ತಾಳೆ. ತುಂಬಾ ಸರಳವಾದ, ಆದರೆ ಗಂಭೀರವಾದ ಕತೆಯಿದು. ಇಂಥ ಹಲವು ಕತೆಗಳು ಈ ಸಂಕಲನದಲ್ಲಿವೆ.

ಮುಸಲ್ಮಾನ ಹೆಣ್ಣುಮಕ್ಕಳು ಬುರ್ಖಾ ಬಂಧಿಯಾಗಿ ಅನುಭವಿಸುತ್ತಿರುವ ನರಕ ಯಾತನೆ, ಎಷ್ಟು ಬೇಕಾದರೂ, ಯಾರನ್ನು ಬೇಕಾದರೂ ಮದುವೆಯಾಗುತ್ತೇವೆ ಎನ್ನುವ ಮುಸಲ್ಮಾನ ಗಂಡಸರ ದಾರ್ಷ್ಟ್ಯತನವನ್ನು ವಿವರಿಸುವ ಹೃದಯದ ಹಣತೆ ಕೃತಿಯು ಇನ್ನಾದರೂ ಮುಸಲ್ಮಾನ ಸಮುದಾಯದ ಕಣ್ಣು ತೆರೆಸಲಿ ಎನ್ನುವುದು ನಮ್ಮ ಆಶಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button