ಬಕ್ರಿದ್ ಹಬ್ಬ ದನ ಕದಿಯುವ ಹಬ್ಬವೇ? ಏನಿದು ಪೊಲೀಸ್ ಸುತ್ತೋಲೆ ಎಡವಟ್ಟು?

ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೊರಡಿಸಿರುವ ಸುತ್ತೋಲೆಯೊಂದು ಸಮಾಜದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹೊರಡಿಸಿರುವ ಸುತ್ತೋಲೆ ಇದೀಗ ವೈರಲ್ ಆಗಿದೆ.
ಬಕ್ರಿದ್ ಹಬ್ಬವನ್ನು ಕಾರಣವಾಗಿಟ್ಟುಕೊಂಡು, ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಹೊರಗಡೆ ಮೇಯಲು ಬಿಡದಂತೆ ಅಗತ್ಯ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಗ್ರಾಮ ಪಂಚಾಯತ್ ಗೆ ಪತ್ರ ಬರೆದಿದೆ. ಪತ್ರದ ಒಕ್ಕಣೆಯ ಪ್ರಕಾರ, ಬಕ್ರಿದ್ ಹಬ್ಬ ಆಚರಿಸುವವರು ದನಕಳ್ಳರು ಎಂಬುದಾಗಿ ಪರೋಕ್ಷವಾಗಿ ತಿಳಿಸಿದಂತಾಗುತ್ತಿದೆ.
ಪತ್ರದ ಸಾರಾಂಶ ಹೀಗಿದೆ, “ದಿನಾಂಕ 07-06-2025 ನಡೆಯಲಿರುವ ಬಕ್ರೀದ್ ಹಬ್ಬದ ಕುರಿತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಗ್ರಾಮ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನ ಹಾಗೂ ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ತಡೆಯುವ ನಿಟ್ಟಿನಲ್ಲಿ ತಮ್ಮ ಇಲಾಖಾ ಸಹಕಾರ ಅತೀ ಪ್ರಾಮುಖ್ಯವಾಗಿರುತ್ತದೆ. ಆದುದರಿಂದ ಇಂದಿನಿಂದ ಬಕ್ರೀದ್ ಹಬ್ಬ ಮುಗಿಯುವವರೆಗೆ ತಮ್ಮ ಗ್ರಾಮ ವ್ಯಾಪ್ತಿಯಲ್ಲಿನ ಗ್ರಾಮಸ್ಥರಿಗೆ ಅವರ ಜಾನುವಾರುಗಳನ್ನು ಹೊರಗಡೆ ಮೇಯಲು ಬಿಡದಂತೆ ತಾವು ಅಗತ್ಯ ಕ್ರಮ ಕೈಗೊಳ್ಳುವರೇ ಕೋರಿಕೆ” ಎಂಬುದಾಗಿ ಪಂಚಾಯತ್ ಪಿಡಿಒ ಅವರಿಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ.
ಸುತ್ತೋಲೆ ಹೊರಡಿಸಿದ ದಿನದಿಂದ ಬಕ್ರೀದ್ ಹಬ್ಬ ಮುಗಿಯುವವರೆಗೆ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಹೊರಗಡೆ ಮೇಯಲು ಬಿಡಬಾರದು ಎಂಬ ಸಾಲುಗಳು ಮುಸಲ್ಮಾನ ಸಮಾಜವನ್ನು ದನಕಳ್ಳರ ಸಮಾಜ ಎಂಬಂತೆ ಬಿಂಬಿಸುವ ರೀತಿಯಲ್ಲಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿದ್ದು, ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ಮೇಲ್ನೋಟಕ್ಕೆ ಇದೊಂದು ಪದಪೋಣಿಸುವಲ್ಲಾದ ಎಡವಟ್ಟು ಎಂದು ತಿಳಿದುಬಂದರೂ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರೇ ಇದಕ್ಕೆ ಉತ್ತರಿಸಬೇಕಷ್ಟೇ.